ಭಾರತೀಯ ಚಿತ್ರರಂಗವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಅನೇಕ ಮಹತ್ತರ ಘನೆಗಳನ್ನು ಒಂದೊಮ್ಮೆ ಮೆಲುಕು ಹಾಕುವ ಈ ಲೇಖನವನ್ನು ಪ್ರಸ್ತುತಪಡಿಸಲಾಗಿದೆ.|History of Indian cinema |
Table of Contents
ಮೊಟ್ಟ ಮೊದಲ ಚಲನಚಿತ್ರ
ಭಾರತದಲ್ಲಿ ಅನೇಕ ಪ್ರಾಯೋಗಿಕ ಕಿರು ಚಿತ್ರಗಳನ್ನು ತೆಗೆದರೂ ಮೊಟ್ಟ ಮೊದಲ ಕಥೆ ಆಧಾರಿತ ಚಿತ್ರವಾಗಿ “ರಾಜಾ ಹರಿಶ್ಚಂದ್ರ” ಚಿತ್ರವು ಜನ ಮನ ಸೆಳೆಯಿತು. ಈ ಮೂಲಕ ಚಿತ್ರದ ನಿರ್ಮಾತೃ ಡುಂಡಿರಾಜ್ ಗೋವಿಂದ್ ಪಾಲ್ಕೆ (ದಾದಾ ಸಾಹೇಬ್ ಪಾಲ್ಕೆ) ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಸಿಕೊಂಡವರು.
1901 ರಿಂದ 1907ರ ವರೆಗೂ ವಿವಿಧ ದೇಶಗಳಲ್ಲಿ ಕಥೆ ಆಧಾರಿತ ಚಲನಚಿತ್ರಗಳು ಬರಲಾರಂಭಿಸಿದವು ಕೆಲವುಗಳು ಸಣ್ಣ ಕಥೆ ಆಧರಿಸಿದರೆ ಕೆಲವು ಪೌರಾಣಿಕ ಹಿನ್ನಲೆಗಳನ್ನು ಪರದೆ ಮೇಲೆ ತರಲು ಯತ್ನಿಸಿದರು, ಕೆಲವರು ನಾಟಕವನ್ನೇ ಚಿತ್ರೀಕರಿಸಲು ಮುಂದಾದರು 1906 ರಲ್ಲಿ ತೆರೆಕಂಡ ‘ದಿ ಲೈಫ್ ಆಫ್ ಕಿಸ್ತ್’ ಚಿತ್ರವು ಮುಂಬೈನಲ್ಲಿ 1911ರಲ್ಲಿ ಪ್ರದರ್ಶಿಸಲಾಯಿತು.
ಡುಂಡಿರಾಜ್ ಪಾಲ್ಕೆ ರವರು ‘ದಿ ಲೈಫ್ ಆಫ್ ಕಿಸ್ತ್’ ಚಿತ್ರದಿಂದ ಪ್ರಭಾವಿತರಾಗಿ ಭಾರತೀಯ ಪುರಾಣಕಥೆಗಳನ್ನು ತೆರೆಮೇಲೆ ತರುವ ಮಹತ್ತರ ಆಸೆಯನ್ನು ಹೊಂದಿದರು ಈ ಮೂಲಕ ಸಾಕಷ್ಟು ಪ್ರಯತ್ನ, ಅಡೆತಡೆಗಳನಂತರ ‘ರಾಜಾ ಹರಿಶ್ಚಂದ್ರ’ ಚಿತ್ರವು ನಿರ್ಮಾಣವಾಯಿತು.

1913 ರಂದು ಬೆಳ್ಳಿ ತೆರೆಯಮೇಲೆ ‘ರಾಜಾ ಹರಿಶ್ಚಂದ್ರ’ ಚಿತ್ರವು ಯಸ್ವಿಯಾಗಿ ಬಿಡುಗಡೆಯಾಯಿತು, ಬರೀ ನಾಟಕದ ಮುಖೇನ ಸತ್ಯ ಹರಿಶ್ಚಂದ್ರ ಕಥೆಯನ್ನು ನೋಡಿದ್ದ ಜನರಿಗೆ ಅತೀ ದೊಡ್ಡ ಬೆಳ್ಳಿ ಪರದೆಯಮೇಲೆ ನಾಟಕಕ್ಕಿಂತ ವಿಭಿನ್ನವಾಗಿ ನೋಡಿ, ಆಸ್ವಾದಿಸಿ ಮನಸೋತರು ಈ ಚಿತ್ರವು ಸಾಕಷ್ಟು ಜನಪ್ರೀಯತೆ ಗಳಿಸಿತು ನೂರು ಪಟ್ಟು ಹೆಚ್ಚು ಹಣಗಳಿಸುವ ಮೂಲಕ ಭಾರತೀಯ ಚಲನಚಿತ್ರ ಇತಿಹಾಸದ ಮೊಟ್ಟ ಮೊದಲ ಯಶಸ್ವೀ ವಾಣಿಜ್ಯ ಚಿತ್ರವಾಗಿ ಐತಿಹ್ಯ ಸಾಧಿಸಿತು.
ಚಿತ್ರನಗರಿಯಾಗಿ ಮುಂಬೈ
ದಾದಾ ಸಾಹೇಬ್ ಪಾಲ್ಕೆ ರವರ “ರಾಜಾ ಹರಿಶ್ಚಂದ್ರ” ಚಿತ್ರವು ಸಾಕಷ್ಟು ಯಶಸ್ಸು ಗಳಿಸಿದ ನಂತರ ಅನೇಕ ಉದ್ಯಮಿಗಳು ಈಗಾಗಲೇ ನಾಟಕದಲ್ಲಿ ಗುರುತಿಸಿಕೊಂಡಿದ್ದ ಕಲಾವಿದರು ನಾಟಕ ಕಂಪನಿಯ ಮಾಲೀಕರುಗಳು ಚಲನಚಿತ್ರ ತಯಾರಿಸುವ ಆಸಕ್ತಿ ಹೆಚ್ಚಿಸಿಕೊಂಡರು.
ಈ ಮೂಲಕ ಭಾರತದಲ್ಲಿ ‘ಮೋಹಿನಿ ಭಸ್ಮಾಸುರ್’, ‘ಲಂಕಾ ದಹನ್’ ನಂತಹ ಕಥೆ ಆಧಾರಿತ ಚಿತ್ರಗಳ ತಯಾರಿಕೆ ಆರಂಭವಾಯಿತು ಕೊಲ್ಕತ್ತದಲ್ಲಿ ಹೀರಾಲಾಲ್ ಸೇನ್, ತಮಿಳುನಾಡಿನ ಆರ್. ನಟರಾಜ ಮೊದಲಿಯಾರ್, ಸುಬ್ರಹ್ಮಣ್ಯಂ, ಎಸ್. ಎಸ್. ವಾಸನ್, ಆಂದ್ರದ ಬಿ. ಎನ್ ರೆಡ್ಡಿ, ಮುಂಬೈನಲ್ಲಿ ಹಿಮಾಶುರಾಯ್, ವಿ. ಶಾಂತರಾಂ, ರಾಜ್ ಕಪೂರ್, ಮೃಣಾಲ್ ಸೇನ್, ಶ್ಯಾಂ ಬೆನಗಲ್, ಮಣಿ ಕೌಲ್, ಕುಮಾರ್ ಸಹಾನಿ ಹೀಗೆ ಪರಂಪರೆ ಬೆಳೆಯುತ್ತ ಸಾಗಿತು.
ಮಹಾರಾಷ್ಟ್ರದಲ್ಲೇ ಸಿನಿಮಾ ಉದಯಿಸಿದರಿಂದ ಮುಂಬೈ ಚಿತ್ರನಗರಿಯಾಗಿ ಬೆಳೆಯಿತು ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಗುಜರಾತಿ ಮೊದಲಾದ ಭಾಷೆಯ ವಾಕ್ಚಿತ್ರಗಳು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿಯೇ ತಯಾರಾದವು.
ಟಾಕಿ ಚಿತ್ರದ ಹೊಸ ಮುನ್ನುಡಿ.
1927ರಲ್ಲಿ ‘ದಿ ಜಾಜ್ ಸಿಂಗರ್’ ಎನ್ನುವ ಚಲನಚಿತ್ರವು ಧ್ವನಿ ಮತ್ತು ಸಂಗೀತದ ಮೂಲಕ ವಿಶ್ವದ ಗಮನ ಸೆಳೆಯಿತು. ಇದರಿಂದ ಪ್ರೇರಣೆಗೊಂಡ ಕೊಲ್ಕತ್ತದ ಮದನ್ ಥಿಯೇಟರ್ಸ್ ನವರು ತಮ್ಮ ಸ್ಟೂಡಿಯೋ ಮೂಲಕ ಧ್ವನಿ ಮತ್ತು ಸಂಗೀತದೊಂದಿಗೆ ‘ಆಲಂ ಆರ’ ಚಿತ್ರವನ್ನು ನಿರ್ಮಾಣ ಮಾಡಿದರು.
14ನೇ ಮಾರ್ಚ್ 1931 ಭಾರತೀಯ ಚಿತ್ರರಂಗದಲ್ಲಿ ಹೊಸ ಪರ್ವ ಆರಂಭವಾದ ದಿನ ‘ಆಲಂ ಆರ’ ತೆರೆಕಾಣುತ್ತಿದ್ದಂತೆ ಪ್ರೇಕ್ಷಕರು ಧ್ವನಿ ಮತ್ತು ಸಂಗೀತ ದೃಶ್ಯ ಕಾವ್ಯಗಳಿಗೆ ಮನಸೋತರು ಆ ಚಿತ್ರದ ಹಾಡುಗಳನ್ನು ಜನಸಾಮಾನ್ಯರೂ ಗುನುಗಲಾರಂಭಿಸಿದರು. ಈ ಮೂಲಕ ಸಂಗೀತಗಾರರಿಗೆ ಚಲನಚಿತ್ರವು ಆತ್ಮೀಯ ಆಮಂತ್ರಣ ನೀಡಿತು. ನಾಟಕ ರೇಡಿಯೋ ಸಂಗೀತ ಕಛೇರಿಗಳಲ್ಲಿ ಹಾಡುತ್ತಿದ್ದ ಗಾಯಕರಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿತು.
‘ಶಿರಿನ್ ಫರಾದ್’ ಎನ್ನುವ ಚಿತ್ರವು ಯಾವುದೇ ಅಡಚಣೆಯಿಲ್ಲದೇ ಬಿಡುಗಡೆಯಾಗಿದ್ದರೆ ಅದೇ ಭಾರತದ ಮೊಟ್ಟ ಮೊದಲ ವಾಕ್ಚಿತ್ರ ಎಂದೆನಿಸಿಕೊಳ್ಳುತ್ತಿತ್ತು.
ಸ್ವಾತಂತ್ರ್ಯ ಪೂರ್ವ ಚಲನಚಿತ್ರ
1940ರ ವೇಳೆಗೆ ಎರಡನೇ ಮಹಾಯುದ್ದದ ಬಿಸಿ ಭಾರತೀಯ ಚಿತ್ರರಂಗದ ಮೇಲೂ ಇದರ ಪರಿಣಾಮ ಎದುರಾಯಿತು ಕಚ್ಚಾ ಫಿಲಂ ದೊರಕದೇ ಚಲನಚಿತ್ರ ತಯಾರಿಕೆಯೇ ಕುಂಟಲಾರಂಭಿಸಿತು. ಇದೊಂದು ರೀತಿಯ ಪರಾಕಾಷ್ಟೆ ಹಂತವನ್ನು ತಲುಪಿತು.
ಆ ವೇಳೆಗಾಗಲೇ ರವೀಂದ್ರರು ಸೇರಿದಂತೆ ಬಹುತೇಕ ಚಿಂತಕರು ಅನಕ್ಷರಸ್ಥರೇ ಹೆಚ್ಚಾಗಿರುವ ಭಾರತದ ಜನಸಾಮಾನ್ಯರಿಗೆ ದೇಶದ ಸಾಧನೆ ಹೇಳುವ ಮುಂದಿನ ಗುರಿ ಏನೆಂಬುದರ ಸಂದೇಶ ತಲುಪಿಸಲು ಕಿರುಚಿತ್ರಗಳನ್ನು ತಯಾರಿಸಿ ಎಲ್ಲೆಡೆ ಪ್ರದರ್ಶಿಸುವ ಯೋಜನೆ ರೂಪಿತವಾಯಿತು ಇವರ ಯೋಜನೆ ಕಾರ್ಯಗತವಾಗಲು ಮುಂದಾದದ್ದು ಕಲ್ಕತ್ತಾದ ಶಾಂತಿ ನಿಕೇತನ ಇನ್ಸಿಟ್ಯೂಟ್.
‘ನಾಟಿರ್ ಪೂಜ’ ಎನ್ನುವ ಕಿರುಚಿತ್ರದ ಬ್ಯಾಲೆ ಹಾಗೂ ಕೆಲವು ದೃಶ್ಯಗಳನ್ನು ರವೀಂದ್ರನಾಥ ಟ್ಯಾಗೂರರೇ ನಿರ್ದೇಶಿಸಿದ್ದರು.
ದೇಶಭಕ್ತಿ ಗೀತೆಗಳನ್ನು ದೇಶಪ್ರೇಮ ಸಾರುವ ಹಾಡುಗಳನ್ನು ಬರೆದು ಬ್ರಿಟೇಷರ ದಬ್ಬಾಳಿಕೆಯನ್ನು ಖಂಡಿಸಿದ ಹಲವಾರು ಘಟನೆಗಳು ಇತಿಹಾಸದಲ್ಲಿ ಅಜರಾಮರವಾಗಿ ನಿಂತಿದೆ.
ಭಾರತೀಯ ಚಲನ ಚಿತ್ರದ ಸುವರ್ಣಯುಗ
1950 ರಿಂದ 1960ರ ವರೆಗಿನ ಭಾರತೀಯ ಚಲನಚಿತ್ರ ರಂಗದ ಕಾಲಘಟ್ಟವನ್ನು ಸುವರ್ಣಯುಗ ಎಂದು ಕರೆಯುತ್ತಾರೆ. ಕಾರಣ ಈ ಹಿಂದೆ ಅಲ್ಲಿಯವರೆಗೂ ಪೌರಾಣಿಕ ಹಿನ್ನಲೆ ನಾಟಕಗಳನ್ನಾಧರಿಸಿದ ಕಥಾ ಚಿತ್ರಗಳು ಬಹುಪಾಲು ತುಂಬಿಹೋಗಿದ್ದವು ಸ್ವಾತಂತ್ರ್ಯ ಪೂರ್ವ ಚಳುವಳಿಗಳು ದೇಶಭಕ್ತಿ ಪ್ರಧಾನ ಚಿತ್ರಗಳಿಗೆ ಹೆಚ್ಚು ಮನ್ನಣೆ ದೊರಕಿಸಿಕೊಟ್ಟಿತ್ತು, ಆದರೆ.
1950ರ ನಂತರ ದಿನಗಳಲ್ಲಿ ಸಾಮಾಜಿಕ, ರಾಜಕೀಯ, ಕೌಟುಂಬಿಕ ಚಿತ್ರಗಳು ಬೆಳ್ಳಿ ತೆರೆಯಮೇಲೆ ರಾರಾಜಿಸಿದವು ಈ ಮೂಲಕ ಸಿದ್ದಸೂತ್ರ ಎನ್ನುವಂತೆ ಹಾಡು ಕುಣಿತ ಹೊಡೆದಾಟಗಳು ನಾಯಕನಟನ ಪ್ರಾಮುಖ್ಯತೆಯನ್ನು ಕಥೆಯಲ್ಲಿ ಹೆಚ್ಚು ವರ್ಣಮಯವಾಗಿ ಬಿಂಬಿಸಿದವು.
ಅಂದಿನ ಕಾಲಘಟ್ಟದಲ್ಲಿ ಗುರುದತ್, ರಾಜ್ ಕಪೂರ್, ದಿಲೀಪ್ ಕುಮಾರ್, ಮೀನಾ ಕುಮಾರಿ ದಕ್ಷಿಣದಲ್ಲಿ ವೈಜಯಂತಿ ಮಾಲ, ಸಾವಿತ್ರಿ, ಪದ್ಮಿನಿ, ಅಂಜಲಿ ದೇವಿ, ಶಿವಾಜಿ ಗಣೇಶನ್ , ಎಂ. ಜಿ ರಾಮಚಂದ್ರನ್, ಎನ್, ಟಿ ರಾಮರಾವು, ಅಕ್ಕಿನೇನಿ ನಾಗೇಶ್ವರ ರಾವ್, ಡಾ|| ರಾಜ್ ಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಸರೋಜಾ ದೇವಿ, ಪಂಡರಿ ಬಾಯಿ ಹಾಗೂ ಅನೇಕ ನಟರುಗಳು ತಮ್ಮ ನಟನಾ ಕೌಶಲ್ಯದಿಂದ ಪ್ರಶಂಸೆಗಳಿಸಿಕೊಂಡು ಅಭಿಮಾನಿಗಳ ಹೃದಯದಲ್ಲಿ ಸಿಂಹಾಸನವೇರಿದರು, ಚಲನ ಚಿತ್ರ ಇತಿಹಾಸದಲ್ಲಿ ತಮ್ಮ ಕಲೆಯಿಂದ ಅಜರಾಮರವಾಗಿ ಉಳಿದರು.
ಮೊದಲ ನಿಷೇಧಿತ ಚಲನಚಿತ್ರಗಳು
ಚಲನ ಚಿತ್ರೋದ್ಯಮವು ಹೊಸ ಪ್ರಕಾರಗಳ ಕಥೆ ಆಧಾರಿತ ಚಿತ್ರಗಳನ್ನು ಬೆಳಕಿಗೆ ತಂದವು ಅವುಗಳಲ್ಲಿ ‘ಭಕ್ತ ವಿದುರ’ (1921) ‘ಬಾಜಿರಾವ್ ಮಸ್ತಾನಿ’ (1925) ಈ ಎರಡೂ ಚಿತ್ರಗಳು ಭಾರತೀಯರ ಸ್ವಾತಂತ್ರ್ಯ ಹೋರಾಟವನ್ನು ಮತ್ತು ಆ ಚಿತ್ರದ ಮೂಲಕ ದೇಶ ಭಕ್ತಿ ಕಿಚ್ಚನ್ನು ಹಚ್ಚುವ ಸಲುವಾಗಿ ಕಥೆಯನ್ನು ಸೃಷ್ಟಿಸಲಾಗಿತ್ತು ಈ ಕುರಿತ ಚಿತ್ರಗಳು ತೆರೆಯಮೇಲೆ ಪ್ರದರ್ಶನವಾದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಇನ್ನಷ್ಟು ಪ್ರೇರಣೆ ದೊರೆತು ಬ್ರಿಟೀಷ್ ಆಡಳಿತ ವ್ಯವಸ್ಥೆ ವಿರುದ್ದ ಧಂಗೆ ಏಳುವ ಸಾಧ್ಯತೆಗಳನ್ನು ಗಮನಿಸಿದ ಅಂದಿನ ಬ್ರಿಟೀಷ್ ಸರ್ಕಾರ ಈ ಎರಡೂ ಚಿತ್ರಗಳನ್ನು ಪ್ರದರ್ಶನಕ್ಕೆ ಅರ್ಹವಲ್ಲವೆಂದು ಪರಿಗಣಿಸಿ ನಿಷೇಧಿಸಿದರು.
ಸಂಗೀತದ ಪರಾಕಾಷ್ಟೆ
ಭಾರತೀಯ ಚಿತ್ರಗಳು ಬೇರೆಲ್ಲಾ ಚಿತ್ರಗಳಿಗಿಂತ ಭಿನ್ನವಾಗಿರಲು ಕಾರಣ ಸಂಗೀತ ಮತ್ತು ನೃತ್ಯದಿಂದ. ಮೊದಲೆಲ್ಲಾ ಪೌರಾಣಿಕ ಸಾಮಾಜಿಕ ನಾಟಕಗಳಲ್ಲಿ ಅತೀ ಹೆಚ್ಚು ಗಾಯನಗಳನ್ನು ಬಳಸಲಾಗುತ್ತಿದ್ದು ಇದೇ ರೀತಿಯಾಗಿ ಚಲನ ಚಿತ್ರದ ಆರಂಭದ ದಿನಗಳಲ್ಲೇ ಅವುಗಳನ್ನು ತಮ್ಮ ಕಥೆಗಳಿಗೆ ಅನುಗುಣವಾಗಿ ರಚಿಸುತ್ತ ಸಂಗೀತಕ್ಕೆ ಹೆಚ್ಚಿನ ಮನ್ನಣೆ ನೀಡಲಾಯಿತು.
ಕೆಲವು ಚಿತ್ರಗಳು ತಮ್ಮ ಸಂಗೀತ, ಸಾಹಿತ್ಯ ಮತ್ತು ಗಾಯನಕ್ಕೆ ಪ್ರಸಿದ್ದಿಹೊಂದಿದವು ಸಂಗೀತ ನಿರ್ದೇಶಕರುಗಳು ಸಿನಿಮಾ ಜಗತ್ತಿಗೆ ತಮ್ಮ ಸಂಗೀತದೊಂದಿಗೆ ಮಾಂತ್ರಿಕತೆ ರೂಪಿಸತೊಡಗಿದರು, ತಮ್ಮ ಗಾಯನದಿಂದ ಪ್ರಸಿದ್ದಿಗಳಿಸಿಕೊಂಡವರಲ್ಲಿ ಲತಾ ಮಂಗೇಶ್ಕರ್, ಮಹಮ್ಮದ್ ರಫಿ, ಕಿಶೋರ್ ಕುಮಾರ್, ಆಶಾ ಬೋಸ್ಲೆ, ಘಂಟಸಾಲ, ಪಿ. ಸುಶೀಲ, ಎಲ್. ಆರ್. ಈಶ್ವರಿ, ಟಿ. ಎಂ. ಸುಂದರ್ ರಾಜನ್, ಎಸ್. ಜಾನಕಿ. ಹಾಗೂ ಮುಂತಾದವವರು.
ತಮ್ಮ ಸಂಗೀತದಿಂದ ಗುರುತಿಸಿಕೊಂಡವರಲ್ಲಿ ರಾಜನ್-ನಾಗೇಂದ್ರ, ವಿಜಯ್ ಭಾಸ್ಕರ್, ಜಿ. ಕೆ. ವೆಂಕಟೇಶ್, ಎಂ, ಎಸ್ ವಿಶ್ವನಾಥನ್, ಕೆ. ವಿ. ಮಹದೇವ್, ಘಂಟಸಾಲ, ಶಂಕರ್-ಜೈಕಿಷನ್, ನೌಶದ್, ಎಸ್. ಡಿ. ಬರ್ಮನ್. ಹಾಗೂ ಅನೇಕರು.
ಚಲನ ಚಿತ್ರ ಇತಿಹಾಸದ ಪ್ರಮುಖ ಮೈಲಿಗಲ್ಲುಗಳು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಪ್ರವೇಶ
ವಿಶ್ವದ ಮೊಟ್ಟ ಮೊದಲ ನಿರ್ದೇಶಕಿಯಾಗಿ ಪ್ರಾನ್ಸ್ ನ ಆಲಿಸ್ ಗೈ-ಬ್ಲಚಿ ಪ್ರಖ್ಯಾತಿ ಹೊಂದಿದರು ಈ ಮೂಲಕ ಸಿನಿಮಾ ಪ್ರಪಂಚದ ಮೊದಲ ನಿರ್ದೇಶಕಿಯಾಗಿ 1890 ರಿಂದ ಮುಂದುವರೆದು ಒಂದು ಸಾವಿರಕ್ಕೂ ಹೆಚ್ಚು ಚಿತ್ರಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ ಇವುಗಳಲ್ಲಿ ಕಾದಂಬರಿ ಆಧಾರಿತ, ನಾಟಕ, ಪೌರಾಣಿಕ ಕಥೆಗಳನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದರು.
ಪಾತಿಮಾ ಬೇಗಂ 1926ರಲ್ಲಿ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಅನೇಕ ಚಿತ್ರಗಳನ್ನು ತಮ್ಮ ಸಂಸ್ಥೆಯ ಮೂಲಕ ನಿರ್ದೇಶನ, ಮತ್ತು ಕಥೆರಚನಕಾರರಾಗಿ ಛಾಪು ಮೂಡಿಸಿದ್ದಾರೆ.
ಸಮನಾಂತರ ಸಿನಿಮಾ ಚಳುವಳಿ
ಸಾಮಾಜಿಕ, ರಾಜಕೀಯ, ಕೌಟುಂಬಿಕ ತುಂಬಿದ ಮಸಾಲ ಸಿನಿಮಾಗಳು ಬೆಳ್ಳಿ ಪರದೆಯ ಮೇಲೆ ರಾರಾಜಿಸ ತೊಡಗಿದ್ದ ಕಾಲದಲ್ಲಿ ಸತ್ಯಜಿತ್ ರೇ, ರಿತ್ವಿಕ್ ಘಟಕ್ ರಂತಹ ಪ್ರತಿಭಾನ್ವಿತ ನಿರ್ದೇಶಕರುಗಳು ಈ ಮೊದಲೇ ಬಳಕೆಯಲ್ಲಿದ್ದ ಸಿದ್ದ ಸೂತ್ರಗಳನ್ನು ಬದಿಗಿರಿಸಿ ಸಮಾನಾಂತರ ಸಿನಿಮಾಗಳನ್ನು ಪರಿಚಯಿಸಿದರು.
ಇವುಗಳನ್ನು ಮೊದಮೊದಲಿಗೆ ವಾಣಿಜ್ಯೇತರ ಸಿನಿಮಾಗಳಂತೆ ಸ್ವೀಕರಿಸಲು ಆಗಲಿಲ್ಲ ಬದಲಿಗೆ ಕಾವ್ಯಾತ್ಮಕವಾಗಿ ವಿಭಿನ್ನ ರೀತಿಯ ಸಿನಿಮಾಗಳನ್ನು ಆಸ್ವಾಧಿಸುವ ಪ್ರೇಕ್ಷಕರು ಚಿತ್ರಮಂದಿರಗಳನ್ನು ಪ್ರವೇಶಿಸಿದರು.

ಸಮಾನಾಂತರ ಸಿನಿಮಾಗಳನ್ನು ನಿರ್ದೇಶಿಸಿದ ಪ್ರಮುಖ ನಿರ್ದೇಶಕರುಗಳು
- ಸತ್ಯಜಿತ್ ರೇ: ಮೂಲತಃ ಬೆಂಗಾಲಿ ನಿರ್ದೇಶಕರು. ಪಥೇರ್ ಪಾಂಚಾಲಿ, ಅಪರಾಜಿತೋ, ಅಪು (ತ್ರಿವಳಿ ಕಥೆ), ಚಾರುಲತ, ದೇವಿ ಮುಂತಾದವುಗಳು.
- ರಿತ್ವಿಕ್ ಕುಮಾರ್ ಘಟಕ್: ಮೂಲತಃ ಬೆಂಗಾಲಿ ನಿರ್ದೇಶಕರು. ಮೆಘೆ ಡಾಕಾ ತಾರ, ಸುಬರ್ಣರೇಖ, ಎ ರಿವರ್ ಕಾಲ್ಡ್ ಟೈಟಾಸ್ ಮತ್ತು ಹಲವು ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸನ್ನು ಗಳಿಸಿದವರು.
- ಬಿಮಲ್ ರಾಯ್: ಬೆಂಗಾಲಿ ಕುಟುಂಬಕ್ಕೆ ಸೇರಿದವರು, ದೋ ಬಿಘಾ ಜಮೀನ್, ಪರಿಣಿತಾ, ಬಿರಾಜ್ ಬಹು ಮತ್ತು ಹಲವು ಚಿತ್ರಗಳನ್ನು ನಿರ್ದೇಶಿಸಿ ಹೆಸರು ವಾಸಿಯಾದವರು.
- ಮೃಣಾಲ್ ಸೇನ್: ಫರಿದಾಪುರ್ ಈಸ್ಟ್ ಬೆಂಗಾಲಿ ಕುಟುಂಬಕ್ಕೆ ಸೇರಿದವರಾಗಿದ್ದು ಸಮಾನಾಂತರ ಸಿನಿಮಾಗಳ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದವರು ಹಿಂದಿ, ತೆಲುಗು ಚಿತ್ರರಂಗದಲ್ಲಿಯೂ ತಮ್ಮ ಹೆಸರು ಗಳಿಸಿಕೊಂಡವರು. ಭುವನ್ ಶೋಮೆ, ಕೋರಸ್, ಕಲ್ಕತ್ತ 71 ಹಾಗೂ ಮುಂತಾದ ಚಲನ ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿಗೆ ಭಾಜನರಾದವರು.
ಸಮಾನಾಂತರ ಸಿನಿಮಾಗಳು ಆರಂಭದಲ್ಲಿ ಜನಮನ್ನಣೆಗಳಿಸದೇ ಇದ್ದರೂ ಕಾಲಾನಂತರದಲ್ಲಿ ಅವುಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಗುರುತಿಸುವ ಮತ್ತು ಪ್ರಶಂಸಿಸುವ ಪ್ರೇಕ್ಷಕರೂ ಹುಟ್ಟಿಕೊಂಡರು ಸತ್ಯಜಿತ್ ರೇ, ರಿತ್ವಿಕ್ ಕುಮಾರ್, ಬಿಮಲ್ ರಾಯ್, ಮೃಣಾಲ್ ಸೇನ್ ನಂತಹ ಅನೇಕರು ಅವರ ಚಿತ್ರಗಳಿಂದ ಪ್ರೇರಿತರಾಗಿ ಸಮಾನಾಂತರ ಸಿನಿಮಾಗಳನ್ನು ಬೆಳ್ಳಿತೆರೆಯ ಮೇಲೆ ತಮ್ಮ ಚಿತ್ರರಂಗಗಳಲ್ಲಿ ಅವಿರತ ಹೋರಾಟ ಮೂಲಕ ಯಶಸ್ಸುಗಳಿಸಿ ಸಿನಿಮಾ ಕೇವಲ ಮಸಾಲ ಮನೋರಂಜನೆಗೆ ಮಾತ್ರ ಸೀಮಿತವಲ್ಲ ಎನ್ನುವುದನ್ನು ತಮ್ಮ ಕಲೆಯ ಮೂಲಕ ಸಾಬೀತುಪಡಿಸಿ ಅನೇಕ ಸಿನಿಮಾ ನಿರ್ಮಾತೃಗಳಿಗೆ ಇಂದಿಗೂ ಸ್ಪೂರ್ತಿಯಾಗಿದ್ದಾರೆ.
For the latest updates and comprehensive writing guides, follow us on Instagram, Facebook, and Telegram.






[…] ‘ಆಲಂ ಆರಾ’ ಭಾರತದ ಮೊದಲ ಟಾಕಿ ಚಿತ್ರ? History… […]